Ramdhyana Charite kannada poem standard VIII written by Kanakadasa. Ramdhyana Charite.

Ramadhyana Charite is a symbolic story that conveys moral values through an argument between food grains. In this tale, Shri Rama visits the ashram of Sage Gautama, who welcomes him with devotion and serves different varieties of food. When Shri Rama asks which millet is the best, Gautama Rishi praises Ragi for its strength and nutritional value.
Hearing this, Rice Flakes feel offended and begin to insult Ragi. The disagreement soon turns into a heated argument, disturbing the peaceful atmosphere of the hermitage. Shri Rama listens patiently to both sides. With calm wisdom and compassion, he decides to teach them a lesson on humility and self-control. He orders both Raagi and Rice Flakes to be sent to jail for six months so they can reflect on their pride and behavior.
ರಾಮಧಾನ್ಯ ಚರಿತೆ
ಕೃತಿಕಾರರ ಪರಿಚಯ
ಸಂತ ಕವಿ, ಹರಿದಾಸ ಪರಂಪರೆಯ ಮತ್ತು ದಾಸ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲಿ ಒಬ್ಬರೆಸಿದ ಖ್ಯಾತಿಗೆ ಭಾಜನರಾದವರು ಕನಕದಾಸರು. ಇವರ ಮೊದಲ ಹೆಸರು ತಿಮ್ಮಪ್ಪನಾಯಕ. ಇವರ ಕಾಲ ಕ್ರಿ.ಶ. ೧೫೦೮.
ಜನ್ಮಸ್ಥಳ ಹಾವೇರಿ ಜಿಲ್ಲೆಯ ಬಾಡ ಗ್ರಾಮ. ತಂದೆ ಬೀರಪ್ಪ ಹಾಗೂ ತಾಯಿ ಬಚ್ಚಮ್ಮ. ಇವರ ಆರಾಧ್ಯ ದೈವ ಹಾಗೂ ಅಂಕಿತನಾಮ ಕಾಗಿನೆಲೆ ಆದಿಕೇಶವ. ವಿಜಯನಗರ ಸಾಮ್ರಾಜ್ಯದಲ್ಲಿ ಸಣ್ಣಮಂಡಲವೊಂದರ ಡಣ್ಣಾಯಕರಾಗಿದ್ದ ತಿಮ್ಮಪ್ಪನಾಯಕನಿಗೆ ಕೊಪ್ಪರಿಗೆ ಹೊನ್ನು ದೊರೆ, ಆ ಬಂಗಾರವನ್ನೆಲ್ಲಾ ಬಡವರಿಗೆ ದಾನ ಮಾಡಿ ವೈರಾಗ್ಯ ಹೊಂದಿ ಕನಕದಾಸರಾದರು. ಇವರ ವಿಶಿಷ್ಟ ಗುಣಗಳಾದ ಭಕ್ತಿ, ವೈರಾಗ್ಯ, ಕಾವ್ಯ ರಚನಾ ಗುಣಗಳು ವ್ಯಾಸರಾಯರ ಶಿಷ್ಯರಾಗುವಂತೆ ಮಾಡಿತು. ಇವರು ರಚಿಸಿರುವ ಕೃತಿಗಳು ಹರಿಭಕ್ತಿಸಾರ, ರಾಮಧಾನ್ಯ ಚರಿತೆ, ಮೋಹನ ತರಂಗಿಣಿ, ಮತ್ತು ನಳಚರಿತ್ರೆ.ಇವಲ್ಲದೆ ನೂರಾರು ಕೀರ್ತನೆಗಳು, ಉಗಾಭೋಗ, ಸುಳಾದಿಗಳು ಮತ್ತು ಮಂಡಿಗೆಗಳನ್ನು ರಚಿಸಿದ್ದಾರೆ.
ಪೂರ್ವ ಕಥೆ
ಧರ್ಮರಾಯನು ತಮ್ಮಂದಿರನೊಡಗೂಡಿ ಹನ್ನೆರಡು ವರ್ಷ ವನವಾಸಕ್ಕಾಗಿ ಕಾಮ್ಯಕ ವನದಲ್ಲಿರುವ ಸಂದರ್ಭ. ಶಾಂಡಿಲ್ಯ ಮುನಿಗಳು ತಮ್ಮ ಮುನಿಪರಿವಾರದೊಂದಿಗೆ ಆಗಮಿಸುತ್ತಾರೆ. ಧರ್ಮಜನು ಯಥಾರ್ಥವಾಗಿ ಸತ್ಕರಿಸುತ್ತಾನೆ. ಅರಣ್ಯವಾಸದ ಕ್ಲೇಶ ಸಂಕಷ್ಟಗಳ ಪರಿಹಾರಾರ್ಥಕವಾಗಿ ಶಾಂಡಿಲ್ಯಮುನಿಗಳು ಶ್ರೀರಾಮಚಂದ್ರನ ಚರಿತ್ರೆಯನ್ನು ನರೆದಲಗ (ರಾಗಿ) ಮತ್ತು ವ್ರೀಹಿ(ಭತ್ತ)ಯರ ಕಥೆಯನ್ನು ವಿವರಿಸುತ್ತಾರೆ. ರಾಮನ ಜನನದಿಂದ ಆರಂಭಿಸಿ, ರಾವಣನನ್ನು ಸಂಹರಿಸಿ, ವಿಭೀಷಣನಿಗೆ ಪಟ್ಟಾಭಿಷೇಕ ಮಾಡಿ ದಾನವ ವಾನರ ಮುಖ್ಯರನ್ನು ಕೂಡಿಕೊಂಡು ಅಯೋಧ್ಯಾ ಅಭಿಮುಖವಾಗಿ ಪ್ರಯಾಣ ಬೆಳೆಸುತ್ತಾನೆ. ಪ್ರಯಾಣ ಕಾಲದಲ್ಲಿ ಸೀತೆಗೆ ರಮಣೀಯ ದೃಶ್ಯಗಳನ್ನು ತೋರಿಸುತ್ತಾ, ಋಷಿಗಳನ್ನು ಸಂದರ್ಶಿಸಿ ಅವರ ಆಶೀರ್ವಾದ ಪಡೆಯುತ್ತಾ ಮುಂದುವರೆಯುತ್ತಾನೆ. ಗೌತಮ ಮುನಿಯ ಆಶ್ರಮದಲ್ಲಿ ಬೆಲ್ಲ, ಸಕ್ಕರೆ, ಜೇನುತುಪ್ಪದ ರಸಾಯನಗಳು ಹಾಗೂ ವಿವಿಧ ಧಾನ್ಯಗಳಿಂದ ತಂದಿರಿಸಿದ ಭಕ್ಷಗಳ ಸಮಾರಾಧನೆಯಾಗುತ್ತದೆ. ಈ ಭಕ್ಷ್ಯಗಳ ರುಚಿ ತಾರತಮ್ಯದ ಬಗೆಗೆ ಮಾತುಕತೆಯಾಗುತ್ತದೆ. ಶ್ರೀರಾಮ ಹನುಮಂತನೊಡನೆ ಈ ವಿಷಯವನ್ನು ಪ್ರಸ್ತಾಪಿಸಿದಾಗ, ಅವನು ನಾನು ಸವಿದ ಧಾನ್ಯದ ತನುವನೀಕ್ಷಿಸಬೇಕು ತರಿಸಿ, ಎಂದು ಕೇಳಿಕೊಳ್ಳುತ್ತಾನೆ. ಗೌತಮನು ಧಾನ್ಯಗಳನ್ನು ತರಿಸುತ್ತಾನೆ. ಧಾನ್ಯಗಳ ಶ್ರೇಷ್ಠತೆಯ ಬಗ್ಗೆ ಚರ್ಚಿತವಾಗುತ್ತದೆ.
ಕೆಲರು ಗೋದಿಯ ಸಾಮೆಯನು ಕೆಲ
ಕೆಲರು ನವಣೆಯ ಕಂಬು ಜೋಳವ
ಕೆಲರು ಹಾರಕವೆಂದು ಕೆಲವರು ನೆಲ್ಲನತಿಶಯವ
ಕೆಲರು ನರೆದಲೆಗನನು ಪತಿಕರಿ
ಸಲದ ನೋಡಿದ ನೃಪತಿಯದರೊಳು
ಹಲವು ಮತವೇಕೊಂದನೇ ಪೇಳೆನಲು ಗೌತಮನು II ೧ II
ಗೌತಮನು “ಕೆಲವರು ಗೋದಿಯನ್ನು, ಕೆಲವರು ಸಾಮೆಯನ್ನು, ಕೆಲವರು ನವಣೆಯನ್ನು, ಕೆಲವರು ಕಂಬನ್ನು,
ಕೆಲವರು ಜೋಳವನ್ನು, ಕೆಲವರು ಹಾರಕವನ್ನು, ಕೆಲವರು ಭತ್ತವನ್ನು, ಕೆಲವರು ರಾಗಿಯನ್ನು ಅತಿಶಯವಾದ ಧಾನ್ಯಗಳೆಂದು ಸಮರ್ಥಿಸಿಕೊಳ್ಳುವರು ಎಂದು ಹೇಳುತ್ತಾನೆ. ಆಗ ಶ್ರೀರಾಮನು ಅವುಗಳನ್ನು ನೋಡಿ “ಇವುಗಳಲ್ಲಿ ಅನೇಕ ಜಾತಿಯೇಕೆ? ಇವುಗಳಲ್ಲಿ ಅತಿಶಯವಾದ ಒಂದು ಧಾನ್ಯವನ್ನು ಹೇಳು” ಎಂದು ಗೌತಮನಿಗೆ ಕೇಳುತ್ತಾನೆ.
ದಾಶರಥಿ ಚಿತ್ತೈಸು ನಮ್ಮಯ
ದೇಶಕತಿಶಯ ನರೆದಲೆಗನೇ
ವಾಸಿಯುಳ್ಳವನೀತ ಮಿಕ್ಕಿನ ಧಾನ್ಯವೇಕೆನಲು
ಲೇಸನಾಡಿದೆ ಮುನಿಪ ಗೌತಮ
ದೋಷರಹಿತನು ಪಕ್ಷಪಾತವ
ನೀಸು ಪರಿಯಲಿ ಮಾಡುವರೆ ಶಿವಯೆಂದನಾವ್ರಿಹಿಗ II೨II
ಗೌತಮನು ಶ್ರೀರಾಮನಿಗೆ “ಶ್ರೀರಾಮನೇ ಕೇಳು, ನಮ್ಮ ನಾಡಿಗೆ ಅತಿಶಯವಾದ ರಾಗಿ ಶ್ರೇಷ್ಠನು. ಈತನು ಇರುವಾಗ ಮಿಕ್ಕ ಧಾನ್ಯಗಳು ಏತಕ್ಕೆ?” ಎಂದು ಹೇಳಿದನು. ಆಗ ವ್ರಿಹಿಗನು “ಗೌತಮ ಮುನಿಯೇ, ಒಳ್ಳೆಯ ಮಾತನಾಡಿದೆ. ದೋಷರಹಿತನಾದ ನೀನು ಈ ರೀತಿಯಲ್ಲಿ ಪಕ್ಷಪಾತವನ್ನು ಮಾಡುವುದೇ?” ಎಂದು ಹೇಳಿದನು.
ಎಲ್ಲ ಧರ್ಮದ ಸಾರವನು ನೀವ್
ಬಲ್ಲಿರರಿಯಿರೆ ಎಲ್ಲರನು ನೀ
ವಿಲ್ಲಿ ನುಡಿವ ಉಪೇಕ್ಷೆಯುಂಟೇ ಸಾಕದಂತಿರಲಿ
ನೆಲ್ಲು ನಾನಿರೆ ಗೋದಿ ಮೊದಲಾ
ದೆಲ್ಲ ಧಾನ್ಯಗಳಿರಲು ಇದರಲಿ
ಬಲ್ಲಿದನು ನರೆದಲೆಗನೆಂಬುದಿದಾವ ಮತವೆಂದ. II ೩ II
ವ್ರಿಹಿಗನು “ನೀವು ಎಲ್ಲ ಧರ್ಮದ ಸಾರವನ್ನು ತಿಳಿದಿರುವಿರಿ. ನೀವು ಎಲ್ಲರನ್ನು ಕಡೆಗಣಿಸಿ ನೀವು ಈ ರೀತಿ ನುಡಿವುದು
ಸರಿಯೇ? ಅದು ಹಾಗಿರಲಿ, ವ್ರಿಹಿಗ (ಭತ್ತವಾದ) ನಾನು, ಗೋಧಿ ಮೊದಲಾದ ಧಾನ್ಯಗಳಿರಲು ಇವುಗಳಲ್ಲಿ ನರೆದಲೆಗನನೇ
(ರಾಗಿಯೇ) ಅತಿಶಯನಾದವನೆಂದು ಅಭಿಪ್ರಾಯಪಡುವುದು ಇದು ಯಾವು ನ್ಯಾಯ?” ಎಂದನು.
ಏನೆಲವೊ ನರೆದಲಗ ನೀನು ಸ
ಮಾನನೇ ಎನಗಿಲ್ಲಿ ನಮ್ಮನು
ದಾನವಾಂತಕ ಬಲ್ಲನಿಬ್ಬರ ಹೆಚ್ಚು ಕುಂದುಗಳ
ಜಾನಕೀ ಪತಿ ಸನಿಹದಲಿ ಕುಲ
ಹೀನ ನೀನು ಪ್ರತಿಷ್ಠ ಸುಡು ಮತಿ
ಹೀನ ನೀನೆಂದೆನುತ ಖತಿಯಲಿ ಬೈದು ಭಂಗಿಸಿದ. II೪II
ವ್ರಿಹಿಗನು ನರೆದಲೆಗನಿಗೆ “ಏನೋ ನರೆದಲೆಗನೇ , ನೀನು ನನಗೆ ಸಮಾನನೇ? ಶ್ರೀರಾಮನು ನಮ್ಮಿಬ್ಬರ ದೋಷಗಳನ್ನು ತಿಳಿದಿರುವನು. ಶ್ರೀರಾಮನ ಬಳಿಯಲ್ಲಿ ಕುಲಹೀನನಾದ ನೀನು, ಮತಿಹೀನನಾದ ನೀನು, ನಿನ್ನ ಪ್ರತಿಷ್ಠೆಯನ್ನು ಸುಡು” ಎಂದು ಕೋಪದಲ್ಲಿ ಹೇಳುತ್ತಾ ಬೈದು ಅವಮಾನಿಸಿದನು.
ಕ್ಷಿತಿಯಮರರುಪನಯನದಲಿ ಸು
ವ್ರತ ಸುಭೋಜನ ಪರಮ ಮಂತ್ರಾ
ಕ್ಷತೆಗಳಲಿ ಶುಭಶೋಭನದಲಾರತಿಗೆ ಹಿರಿಯರಲಿ
ಕ್ರತುಗಳೆಡೆಯೊಳಗರಮನೆಯಲಿ
ಪ್ರತಿದಿನವು ರಂಜಿಸುತ ದೇವರಿ
ಗತಿಶಯದ ನೈವೇದ್ಯ ತಾನಿಹೆನೆಂದನಾ ವ್ರಿಹಿಗ. II೫II
ವ್ರಿಹಿಗನು ನರೆದಲೆಗಣಿಗೆ “ಬ್ರಾಹ್ಮಣರು ಉಪನಯನದಲ್ಲಿ, ಸುವ್ರತಾಚರಣೆಯಲ್ಲಿ, ಸುಖಕರವಾದ ಭೋಜನಗಳಲ್ಲಿ, ಶ್ರೇಷ್ಠವಾದ ಮಂತ್ರಾಕ್ಷತೆಗಳಲ್ಲಿ, ಶುಭಶೋಭನ ಕಾರ್ಯಗಳ ಆರತಿಯಲ್ಲಿ, ಹಿರಿಯರು ಹರಸುವಲ್ಲಿ, ಯಜ್ಞಯಾಗಾದಿಗಳಲ್ಲಿ, ಅರಮನೆಯಲ್ಲಿ, ಪ್ರತಿದಿನವು ಆನಂದದಿಂದ ದೇವರಿಗೆ ಅತಿಶಯವಾದ ನೈವೇದ್ಯ ಮಾಡುವಲ್ಲಿ ನಾನಿರುವೆನು” ಎಂದನು.
ಸತ್ಯಹೀನನು ಬಡವರನು ಕ
ಣ್ಣೆತ್ತಿನೋಡೆ ಧನಾಢ್ಯರನು ಬೆಂ
ಬತ್ತಿ ನಡೆವ ಅಪೇಕ್ಷೆ ನಿನ್ನದು ಹೇಳಲೇನದನು
ಹೆತ್ತ ಬಾಣಂತಿಯರು ರೋಗಿಗೆ
ಪತ್ಯ ನೀನಹೆ ಹೆಣದ ಬಾಯಿಗೆ
ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕರವೆಂದ. II೬II
ನರೆದಲೆಗನು ವ್ರಿಹಿಗನನ್ನು ಕುರಿತು “ನೀನು ಸತ್ಯಹೀನನು, ಬಡವರನ್ನು ಕಣ್ಣೆತ್ತಿಯೂ ಸಹ ನೋಡುವುದಿಲ್ಲ. ಶ್ರೀಮಂತರನ್ನು ಹಿಂಬಾಲಿಸಿ ಹೋಗುವ ಬಯಕೆ ನಿನ್ನದು, ನಿನ್ನ ಬಗ್ಗೆ ಇನ್ನು ಹೇಳಲು ಏನಿದೆ? ನೀನು ಹೆತ್ತ ಬಾಣಂತಿಯರಿಗೆ ಪಥ್ಯವಾಗಿರುವೆ. ನೀನು ಹೆಣದ ಬಾಯಿಗೆ ತುತ್ತಾಗಿರುವೆ. ನಿನ್ನ ಜನ್ಮ ನಿಷ್ಪ್ರಯೋಜಕವಾದುದು”ಎಂದು ಹೇಳಿದನು. .
ಮಳೆದೆಗೆದು ಬೆಳೆಯಡಗಿ ಕ್ಷಾಮದ
ವಿಲಯಕಾಲದೊಳನ್ನವಿಲ್ಲದೆ
ಅಳಿವ ಪ್ರಾಣಿಗಳಾದರಿಸಿ ಸಲಹುವೆನು ಜಗವರಿಯೆ
ಎಲವೊ ನೀನೆಲ್ಲಿಹೆಯೊ ನಿನ್ನಯ
ಬಳಗವದು ತಾನೆಲ್ಲಿಹುದು ಈ
ಹಲವು ಹುಲು ಧಾನ್ಯಗಳೆನಗೆ ಸರಿದೊರೆಯೆ ಕೇಳೆಂದ II೭II
ನರೆದಲೆಗನು ವ್ರಿಹಿಗನನ್ನು ಕುರಿತು “ಎಲವೋ ಕೇಳು, ಮಳೆಯು ಮರೆಯಾಗಿ, ಬೆಳೆಯು ನಾಶವಾಗಿ, ಬರದ ಕ್ಷಾಮಕಾಲದಲ್ಲಿ ಅನ್ನವಿಲ್ಲದೆ ಸಾಯುವ ಪ್ರಾಣಿಗಳನ್ನು ಪ್ರೀತಿಯಿಂದ ಸತ್ಕರಿಸಿ ಸಲಹುವೆನು ಎಂಬುದನ್ನು ಜಗವೆಲ್ಲ ಅರಿತಿದೆ. ಇಂತಹ ಬರಗಾಲದಲ್ಲಿ ನೀನು ಎಲ್ಲಿರುವೆ? ನಿನ್ನ ಬಳಗವು ಎಲ್ಲಿಹುದೋ? ಈ ಅನೇಕ ಅಲ್ಪವಾದ ಧಾನ್ಯಗಳು ನನಗೆ ಸರಿಸಮವೇ?” ಎಂದನು.
ಮಸೆದುದಿತ್ತಂಡಕ್ಕೆ ಮತ್ಸರ
ಪಿಸುಣ ಬಲರತಿ ನಿಷ್ಠುರರು ವಾ
ದಿಸಲು ಕಂಡನು ನೃಪತಿ ಮನದಲಿ ನೋಡಿ ನಸುನಗುತ
ಹಿಸುಣರಿವದಿರ ಮತ್ಸರವ ಮಾ
ಣಿಸುವ ಹದನೇನೆನುತ ಯೋಚಿಸಿ
ದ ಸುರ ಮುನಿಪರ ನೋಡೆ ಗೌತಮ ಮುನಿಪನಿಂತೆಂದ II೮II
ಎರಡು ಗುಂಪುಗಳಿಗೂ ಸ್ವರ್ಧೆಯುಂಟಾಗಿ ದ್ವೇಷದಿಂದ ಪರಸ್ಪರ ಒಬ್ಬರ ಮೇಲೆ ಒಬ್ಬರು ದೂರುವುದರಲ್ಲಿ ಸಮರ್ಥರಾಗಿ, ಅತಿ ನಿರ್ದಯಿಗಳಾಗಿ ವಾದಿಸಲು ಇದನ್ನು ಕಂಡ ಶ್ರೀರಾಮನು ಮನದಲ್ಲಿ ನಸುನಗುತ “ಕುತ್ಸಿತ
ಬುದ್ಧಿಯವರಾದ ಇವರ ದ್ವೇಷವನ್ನು ಹೋಗಲಾಡಿಸುವ ರೀತಿ ಯಾವುದು? ಎಂದು ಯೋಚಿಸಿ. ಗೌತಮರ ಕಡೆಗೆ ನೋಡಲು, ಗೌತಮರು ಹೀಗೆಂದು ಹೇಳಿದರು.
ಅರಸುಗಳು ನಾವೆಲ್ಲ ಭೂಮೀ
ಸುರರು ನೆರೆದಿಹ ದಾನವರು ವಾ
ನರರು ನಮಗೀ ನ್ಯಾಯವನು ಪರಿಹರಿಸಲಳವಲ್ಲ
ಕರೆಸುವೆವು ಹರಿಹರವಿರಂಚಾ
ದ್ಯರನಯೋಧ್ಯೆಗೆ ಅವರ ಗುಣವಾ
ಧರಿಸಿ ಪೇಳ್ವರು ನಯದೊಳೆಂದನು ರಾಮ ನಸುನಗುತ II೯II
ಗೌತಮರು “ನಾವು ಬ್ರಾಹ್ಮಣರು, ರಾಜರು, ದಾನವರು, ವಾನರರು, ನಮಗೆ ಈ ನ್ಯಾಯವನ್ನು ಪರಿಹರಿಸುವ ಸಾಮರ್ಥ್ಯವಿಲ್ಲ ಹರಿಹರಬ್ರಹ್ಮ ಮೊದಲಾದವರನ್ನು ಅಯೋಧ್ಯೆಗೆ ಕರೆಸುವೆವು. ಅವರು ಇವರ ಗುಣವನ್ನು ಆಧರಿಸಿ ನ್ಯಾಯವನ್ನು ಹೇಳುವರು” ಎಂದನು.
ಪರಮ ಧಾನ್ಯದೊಳಿಬ್ಬರೇ ಇವ
ರಿರಲಿ ಸೆರೆಯೊಳಗಾರು ತಿಂಗಳು
ಹಿರಿದು ಕಿರಿದೆಂಬಿವರ ಪೌರುಷವರಿಯಬಹುದಿನ್ನು
ಪುರಕೆ ಗಮನಿಸಿ ನಾವು ನಿಮ್ಮನು
ಕರೆಸುವೆವು ಕೇಳೆನುತಯೋಧ್ಯಾ
ಪುರಿಗೆ ಪಯಣವ ಮಾಡಹೇಳಿದನಾ ವಿಭೀಷಣಗೆ II೧೦II
ಆಗ ರಾಮ ನಸುನಗುತ “ಪರಮಧ್ಯಾನದಲ್ಲಿ ಇವರು ಇಬ್ಬರೇ ಸೆರೆಮನೆಯೊಳಗೆ ಆರು ತಿಂಗಳು ಇರಲಿ. ಹಿರಿದು ಕಿರಿದು ಎಂಬ ಇವರ ಪೌರುಷವನ್ನು ಅರಿಯಬಹುದು. ಕೇಳಿ, ಇನ್ನು ನಾವು ಅಯೋಧ್ಯೆಗೆ ಹೋದ ನಂತರ ನಿಮ್ಮನ್ನು ಕರೆಸುವೆವು” ಎಂದು ಹೇಳಿ ವಿಭೀಷಣನಿಗೆ ಅಯೋಧ್ಯೆಗೆ ಪ್ರಯಾಣ ಮಾಡಲು ಹೇಳಿದನು
ಪದಗಳ ಅರ್ಥ
ಕ್ರ ತು – ಯಾಗ, ಯಜ್ಞ
ಕ್ಷಿತಿಯಮರರು – ಬ್ರಾಹ್ಮಣರು
ಖತಿ – ಕೋಪ, ದುಃಖ, ಅಳಲು
ನೆರೆದಲೆ – ರಾಗಿ
ನೆಲ್ಲು – ಭತ್ತ
ಪಕ್ಷಪಾತ – ಭೇದಭಾವ
ಪತಿಕರಿಸಲು – ಅಂಗೀಕರಿಸಲು
ಪಿಸುಣ – ಚಾಡಿಕೋರ, ನೀಚ
ಪ್ರತಿಷ್ಠ – ಗರ್ವ
ವಿರಂಚಿ – ಬ್ರಹ್ಮ, ಅಜ
ವ್ರಿಹಿಗ – ಭತ್ತ
ಹದನು – ರೀತಿ, ಕ್ರಮ
ಹಿಸುಣ – ಕುತ್ಸಿತ ಬುದ್ಧಿಯವ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. (Answer the following in one sentence)
೧. ದೇಶಕೆ ಅತಿಶಯವಾದ ಧಾನ್ಯ ಯಾವುದು?
ಉ: ದೇಶಕೆ ಅತಿಶಯವಾದ ಧಾನ್ಯ ರಾಗಿ.
೨. ವ್ರಿಹಿ ಯಾರ ಬಾಯಿಗೆ ತುತ್ತು ಎಂದು ಹೇಳಿದೆ?
ಉ: ವ್ರಿಹಿ ಹೆಣದ ಬಾಯಿಗೆ ತುತ್ತು ಎಂದು ಹೇಳಿದ.
೩. ದಾಶರಥಿ ಎಂದರೆ ಯಾರು?
ಉ: ದಾಶರಥಿ ಎಂದರೆ ಶ್ರೀರಾಮ.
೪. ನರೆದಲಗ ಯಾರನ್ನು ಆದರಿಸಿ ಸಲಹುತ್ತದೆ?
ಉ: ನರೆದೆಲಗವು ಕ್ಷಾಮದ ಕಾಲದಲ್ಲಿ ಅನ್ನವಿಲ್ಲದೆ ನಾಶವಾಗುವ ಪ್ರಾಣಿಗಳನ್ನು ಆದರಿಸಿ ಸಲಹುತ್ತದೆ.
೫. ಹರಿಹರ ವಿರಂಚಿಗಳನ್ನು ಏತಕ್ಕಾಗಿ ಅಯೋಧ್ಯೆಗೆ ಕರೆಸಲಾಗುತ್ತದೆ?
ಉ: ಹರಿಹರ ವಿರಂಚಿಗಳನ್ನು ರಾಗಿ ಮತ್ತು ಭತ್ತರ ನಡುವಿನ ವ್ಯಾಜ್ಯವನ್ನು ಪರಿಹರಿಸಲು ಅಯೋಧ್ಯೆಗೆ ಕರೆಸಲಾಗುತ್ತದೆ.
೬. ಸೆರೆಗೆ ಯಾರು ಯಾರನ್ನು ಹಾಕಲಾಗುತ್ತದೆ?
ಉ: ಸೆರೆಗೆ ರಾಗಿ ಮತ್ತು ಭತ್ತಗಳನ್ನು ಹಾಕಲಾಗುತ್ತದೆ.
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ. . (Answer the following in three – four sentences)
೧. ಶ್ರೇಷ್ಠವೆಂದು ಹೇಳಲಾಗಿರುವ ಧಾನ್ಯಗಳಾವುವು?
ಉ: ಗೌತಮನು “ಕೆಲವರು ಗೋಧಿಯನ್ನು, ಸಾಮೆಯನ್ನು, ನವಣೆಯನ್ನು, ಕಂಬನ್ನು, ಜೋಳವನ್ನು, ಹಾರಕವನ್ನು, ಭತ್ತವನ್ನು, ರಾಗಿಯನ್ನು ಶ್ರೇಷ್ಠವಾದ ಧಾನ್ಯಗಳು ಎಂದು ಹೇಳುತ್ತಾರೆ.
೨. ಗೌತಮರು ನರೆದಲಗನೆ ಶ್ರೇಷ್ಠವೆನ್ನಲು ವ್ರಿಹಿಯು ಹೇಳಿದ್ದೇನು?
ಉ: ವ್ರಿಹಿಯು ಗೌತಮರನ್ನು “ನೀವು ಎಲ್ಲ ಧರ್ಮದ ಸಾರವನ್ನು ತಿಳಿದಿರುವಿರಿ. ನೀವು ಎಲ್ಲರನ್ನು ಕಡೆಗಣಿಸಿ ಈ ರೀತಿ ನುಡಿವುದು ಸರಿಯೇ? ನನ್ನನ್ನು, ಗೋಧಿ ಮೊದಲಾದ ಧಾನ್ಯಗಳಿರುವಾಗ ನರೆದಲೆಗನೇ ಶ್ರೇಷ್ಠವೆನ್ನುವುದು ಯಾವು ನ್ಯಾಯ?” ಎಂದನು.
೩. ವ್ರಿಹಿಯನ್ನು ಯಾವ ಯಾವ ಮಂಗಳ ಕಾರ್ಯಗಳಲ್ಲಿ ಬಳಸಲಾಗುತ್ತದೆ?
ಉ: “ಬ್ರಾಹ್ಮಣರು ಉಪನಯನದಲ್ಲಿ, ಸುವ್ರತಾಚರಣೆಯಲ್ಲಿ, ಸುಖಕರವಾದ ಭೋಜನಗಳಲ್ಲಿ, ಶ್ರೇಷ್ಠವಾದ
ಮಂತ್ರಾಕ್ಷತೆಗಳಲ್ಲಿ, ಶುಭ ಕಾರ್ಯಗಳ ಆರತಿಯಲ್ಲಿ, ಹಿರಿಯರು ಹರಸುವಲ್ಲಿ, ಯಜ್ಞಯಾಗಾದಿಗಳಲ್ಲಿ, ಅರಮನೆಯಲ್ಲಿ, ಪ್ರತಿದಿನವು ಆನಂದದಿಂದ ದೇವರಿಗೆ ಅತಿಶಯವಾದ ನೈವೇದ್ಯ ಮಾಡುವಲ್ಲಿ” ವ್ರಿಹಿಯನ್ನು ಮಂಗಳ ಕಾರ್ಯಗಳಲ್ಲಿ ಬಳಸಲಾಗುತ್ತದೆ.
೪. ನರೆದಲಗವು ವ್ರಿಹಿಯನ್ನು ಏನೆಂದು ಹೀಯಾಳಿಸಿತು?
ಉ: ನರೆದಲೆಗನು ವ್ರಿಹಿಗನನ್ನು ಕುರಿತು “ನೀನು ಸತ್ಯಹೀನನು, ಬಡವರನ್ನು ಕಣ್ಣೆತ್ತಿಯೂ ಸಹ ನೋಡುವುದಿಲ್ಲ. ಶ್ರೀಮಂತರನ್ನು ಹಿಂಬಾಲಿಸಿ ಹೋಗುವ ಬಯಕೆ ನಿನ್ನದು. ನಿನ್ನ ಬಗ್ಗೆ ಇನ್ನು ಹೇಳಲು
ಏನಿದೆ? ನೀನು ಹೆತ್ತ ಬಾಣಂತಿಯರಿಗೆ ಪಥ್ಯವಾಗಿರುವೆ. ನೀನು ಹೆಣದ ಬಾಯಿಗೆ ತುತ್ತಾಗಿರುವೆ. ನಿನ್ನ ಜನ್ಮ ನಿಷ್ಪ್ರಯೋಜಕವಾದುದು” ಎಂದು ಹೀಯಾಳಿಸಿತು.
೫. ಶ್ರೀರಾಮನು ಧಾನ್ಯಗಳ ವಿಚಾರದಲ್ಲಿ ಕೈಗೊಂಡ ತೀರ್ಮಾನವೇನು?
ಉ: ಶ್ರೀರಾಮನು ಇವರಿಬ್ಬರೇ ಸೆರೆಮನೆಯೊಳಗೆ ಆರು ತಿಂಗಳು ಇರಲಿ. ಹಿರಿದು ಕಿರಿದು ಎಂಬ ಇವರ ಪೌರುಷವನ್ನು ಅರಿಯಬಹುದು ಎಂಬ ತೀರ್ಮಾನ ಕೈಗೊಂಡನು.
ಇ. ಕೆಳಗಿನ ಪ್ರಶ್ನೆಗಳಿಗೆ ಏಳು-ಎಂಟು ವಾಕ್ಯಗಳಲ್ಲಿ ಉತ್ತರಿಸಿ. (Answer the following in eight – ten sentences)
೧. ಶ್ರೀರಾಮನು ನರೆದಲೆಗ ಹಾಗೂ ವ್ರಿಹಿಯನ್ನು ಸೆರೆಮನೆಗೆ ಹಾಕಲು ಕಾರಣವೇನು?
ಉ: ಶ್ರೀರಾಮನು ಗೌತಮ ಮುನಿಯ ಆಶ್ರಮದಲ್ಲಿ ಸವಿದ ವಿವಿಧ ಭಕ್ಷಗಳನ್ನು ತಯಾರಿಸಿದ ಧಾನ್ಯಗಳನ್ನು ನೋಡಬೇಕೆಂದು ಹೇಳುತ್ತಾನೆ. ಆಗ ಗೌತಮರು ಎಲ್ಲ ರೀತಿಯ ಧಾನ್ಯಗಳನ್ನು ತರಿಸಿ ರಾಮನಿಗೆ ತೋರಿಸಿ ಅವುಗಳ ಶ್ರೇಷ್ಠತೆಯನ್ನು ಕುರಿತು ಚರ್ಚಿಸುತ್ತಾರೆ. ಗೌತಮರು “ಕೆಲವರು ಗೋಧಿಯನ್ನು, ಸಾಮೆಯನ್ನು, ನವಣೆಯನ್ನು, ಕಂಬನ್ನು, ಜೋಳವನ್ನು, ಹಾರಕವನ್ನು, ಭತ್ತವನ್ನು, ರಾಗಿಯನ್ನು ಶ್ರೇಷ್ಠವಾದ ಧಾನ್ಯಗಳು” ಎಂದು ಹೇಳುತ್ತಾರೆ.
ಆಗ ಭತ್ತವು ಶ್ರೇಷ್ಠನಾದ ನಾನಿರುವಾಗ ರಾಗಿಯನ್ನು ಶ್ರೇಷ್ಠವೆಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿ, ರಾಗಿಯನ್ನು ಹೀಯಾಳಿಸುತ್ತದೆ. ಹೀಗೆ ರಾಗಿ ಮತ್ತು ಭತ್ತಗಳು ತಮ್ಮ ಶ್ರೇಷ್ಠತೆಯ ಬಗ್ಗೆ ಜಗಳವಾಡಿಕೊಳ್ಳುತ್ತವೆ. ಆಗ ಶ್ರೀರಾಮನು ನಸುನಗುತ “ಪರಮಧ್ಯಾನದಲ್ಲಿ ಇವರಿಬ್ಬರೇ ಸೆರೆಮನೆಯೊಳಗೆ ಆರು ತಿಂಗಳು ಇರಲಿ. ಹಿರಿದು ಕಿರಿದು ಎಂಬ ಇವರ ಪೌರುಷವನ್ನು ಅರಿಯಲಿ” ಎಂದು ಹೇಳಿ ಸೆರೆಮನೆಗೆ ಹಾಕುತ್ತಾರೆ.
೨. ನರೆದಲಗ ಹಾಗೂ ವ್ರಿಹಿಗಳ ನಡುವೆ ನಡೆದ ಸಂವಾದವನ್ನು ನಿಮ್ಮ ಮಾತುಗಳಲ್ಲಿ ವಿವರಿಸಿ.
ಉ: ವ್ರಿಹಿಗವು ನರೆದಲೆಗನಿಗೆ “ನರೆದಲೆಗವೇ , ನೀನು ನನಗೆ ಸಮಾನನೇ? ಶ್ರೀರಾಮನು ನಮ್ಮಿಬ್ಬರ ದೋಷಗಳನ್ನು ತಿಳಿದಿರುವನು. ಶ್ರೀರಾಮನ ಬಳಿಯಲ್ಲಿ ಕುಲಹೀನನಾದ ನೀನು, ಮತಿಹೀನನಾದ ನೀನು, ನಿನ್ನ ಪ್ರತಿಷ್ಠೆಯನ್ನು ಸುಡು” ಎಂದು ಕೋಪದಲ್ಲಿ ಹೇಳುತ್ತಾ ಬೈದು ಅವಮಾನಿಸಿದನು. ಆಗ ವ್ರಿಹಿಗನು ನರೆದಲೆಗನಿಗೆ “ಬ್ರಾಹ್ಮಣರು ಉಪನಯನದಲ್ಲಿ, ಸುವ್ರತಾಚರಣೆಯಲ್ಲಿ, ಸುಖಕರವಾದ ಭೋಜನಗಳಲ್ಲಿ, ಶ್ರೇಷ್ಠವಾದ ಮಂತ್ರಾಕ್ಷತೆಗಳಲ್ಲಿ, ಶುಭ ಕಾರ್ಯಗಳ ಆರತಿಯಲ್ಲಿ, ಹಿರಿಯರು ಹರಸುವಲ್ಲಿ, ಯಜ್ಞಯಾಗಾದಿಗಳಲ್ಲಿ, ಅರಮನೆಯಲ್ಲಿ, ಪ್ರತಿದಿನವು ಆನಂದದಿಂದ ದೇವರಿಗೆ ಅತಿಶಯವಾದ ನೈವೇದ್ಯ ಮಾಡುವಲ್ಲಿ” ತನ್ನನ್ನು ಮಂಗಳ ಕಾರ್ಯಗಳಲ್ಲಿ ಬಳಸಲಾಗುತ್ತದೆ ಎಂದನು. ನರೆದಲೆಗನು ವ್ರಿಹಿಗನನ್ನು ಕುರಿತು “ನೀನು ಸತ್ಯಹೀನನು, ಬಡವರನ್ನು ಕಣ್ಣೆತ್ತಿಯೂ ಸಹ ನೋಡುವುದಿಲ್ಲ.
ಶ್ರೀಮಂತರನ್ನು ಹಿಂಬಾಲಿಸಿ ಹೋಗುವ ಬಯಕೆ ನಿನ್ನದು. ನಿನ್ನ ಬಗ್ಗೆ ಇನ್ನು ಹೇಳಲು ಏನಿದೆ? ನೀನು ಹೆತ್ತ ಬಾಣಂತಿಯರಿಗೆ ಪಥ್ಯವಾಗಿರುವೆ. ನೀನು ಹೆಣದ ಬಾಯಿಗೆ ತುತ್ತಾಗಿರುವೆ. ನಿನ್ನ ಜನ್ಮ ನಿಷ್ಪ್ರಯೋಜಕ ವಾದುದು” ಎಂದು ಹೀಯಾಳಿಸಿತು. ಇವು ನರೆದಲಗ ಹಾಗೂ ವ್ರಿಹಿಗಳ ನಡುವೆ ನಡೆದ ಸಂವಾದ ನಡೆಯುತ್ತದೆ.
ಈ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
೧. “ನಮ್ಮಯ ದೇಶಕತಿಶಯ ನರೆದಲಗ”
ಆಯ್ಕೆ : ಈ ವಾಕ್ಯವನ್ನು ಶ್ರೀಕನಕದಾಸರು ರಚಿಸಿರುವ ‘ರಾಮಧಾನ್ಯ ಚರಿತೆ’ ಎಂಬ ಕೃತಿಯ ಪದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ: ಶ್ರೀರಾಮನು ಗೌತಮ ಮುನಿಯ ಆಶ್ರಮದಲ್ಲಿ ಸವಿದ ವಿವಿಧ ಭಕ್ಷಗಳನ್ನು ತಯಾರಿಸಿದ ಧಾನ್ಯಗಳನ್ನು ನೋಡಬೇಕೆಂದು ಹೇಳುತ್ತಾನೆ. ಆಗ ಗೌತಮರು ಎಲ್ಲ ರೀತಿಯ ಧಾನ್ಯಗಳನ್ನು ತರಿಸಿ ರಾಮನಿಗೆ ತೋರಿಸಿ ಅವುಗಳ ಶ್ರೇಷ್ಠತೆಯನ್ನು ಕುರಿತು ಚರ್ಚಿಸುತ್ತಾರೆ. ಎಲ್ಲ ಧಾನ್ಯಗಳ ಮಹತ್ವವನ್ನು ತಿಳಿಸಬೇಕೆಂದು ಗೌತಮ ಮುನಿಯನ್ನು ಕೇಳಿಕೊಂಡ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ: ದೇಶದಲ್ಲಿರುವ ಎಲ್ಲಾ ಧಾನ್ಯಗಳಲ್ಲಿ ರಾಗಿಯೇ ಸರ್ವಶ್ರೇಷ್ಠವಾದ ಧಾನ್ಯ ಎಂಬುದು ಸ್ವಾರಸ್ಯಕರವಾಗಿದೆ.
೨. “ಕುಲಹೀನ ನೀನು ಪ್ರತಿಷ್ಠ ಸುಡು ಮತಿಹೀನ ನೀನು”
ಆಯ್ಕೆ : ಈ ವಾಕ್ಯವನ್ನು ಶ್ರೀಕನಕದಾಸರು ರಚಿಸಿರುವ ‘ರಾಮಧಾನ್ಯ ಚರಿತೆ’ ಎಂಬ ಕೃತಿಯ ಪದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ: ಶ್ರೀರಾಮನ ಬಳಿಯಲ್ಲಿ “ಕುಲಹೀನನಾದ ನೀನು, ಮತಿಹೀನನಾದ ನೀನು, ನಿನ್ನ ಪ್ರತಿಷ್ಠೆಯನ್ನು ಸುಡು” ಎಂದು ಕೋಪದಲ್ಲಿ ಹೇಳುತ್ತಾ ಬೈದು ಅವಮಾನಿಸಿದ ಸಂದರ್ಭದಲ್ಲಿ ವ್ರೀಹಿಯು ನರೆದಲೆಗನಿಗೆ ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ: ವ್ರಿಹಿಯು ರಾಗಿಯನ್ನು ಕುಲಹೀನ, ಮತಿಹೀನ, ನೀನು ಶ್ರೇಷ್ಠನಲ್ಲ ಎಂದು ಅವಮಾನಿಸುವುದು ಸ್ವಾರಸ್ಯಕರವಾಗಿದೆ.
೩. “ವಿಲಯಕಾಲದೊಳನ್ನವಿಲ್ಲದೆ ಅಳಿವ ಪ್ರಾಣಿಗಳಾಧರಿಸಿ ಸಲಹುವೆ”
ಆಯ್ಕೆ : ಈ ವಾಕ್ಯವನ್ನು ಶ್ರೀಕನಕದಾಸರು ರಚಿಸಿರುವ ‘ರಾಮಧಾನ್ಯ ಚರಿತೆ’ ಎಂಬ ಕೃತಿಯ ಪದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ: ಗೌತಮ ಮುನಿಯ ಆಶ್ರಮದಲ್ಲಿ ಶ್ರೀರಾಮನ ಮುಂದೆ ನರೆದಲೆಗ ಮತ್ತು ವ್ರಿಹಿಗಳು ತಮ್ಮ ತಮ್ಮ ಶ್ರೇಷ್ಠತೆಯನ್ನು ಹೇಳಿಕೊಂಡ ಪರಸ್ಪರ ಜಗಳವಾಡಿಕೊಂಡ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ: ರಾಗಿಯು ಬೆಳೆಯಲು ಕಡಿಮೆ ನೀರು ಸಾಕು, ಬರಗಾಲದಲ್ಲೂ ಸಹ ಬೆಳೆದು ಪ್ರಾಣಿಗಳನ್ನು ಸಲಹುತ್ತದೆ. ಹಾಗಾಗಿ ರಾಗಿಯೇ ಶ್ರೇಷ್ಠ ಎಂಬುದು ಸ್ವಾರಸ್ಯವಾಗಿದೆ.
೪. “ಇವರಿರಲಿ ಸೆರೆಯೊಳಗಾರು ತಿಂಗಳು”
ಆಯ್ಕೆ : ಈ ವಾಕ್ಯವನ್ನು ಶ್ರೀಕನಕದಾಸರು ರಚಿಸಿರುವ ‘ರಾಮಧಾನ್ಯ ಚರಿತೆ’ ಎಂಬ ಕೃತಿಯ ಪದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ: “ಪರಮಧ್ಯಾನದಲ್ಲಿ ಇವರಿಬ್ಬರೇ ಸೆರೆಮನೆಯೊಳಗೆ ಆರು ತಿಂಗಳು ಇರಲಿ. ಹಿರಿದು ಕಿರಿದು ಎಂಬ ಇವರ ಪೌರುಷವನ್ನು ಅರಿಯಲಿ” ಎಂದು ಹೇಳಿದ ಸಂದರ್ಭದಲ್ಲಿ ಶ್ರೀರಾಮನು ಈ ಮಾತನ್ನು
ಹೇಳಿದ್ದಾನೆ.
ಸ್ವಾರಸ್ಯ: ರಾಗಿ ಮತ್ತು ಭತ್ತದಲ್ಲಿ ಯಾರು ಶ್ರೇಷ್ಠ ಎಂಬುದನ್ನು ತಿಳಿದುಕೊಳ್ಳಲು ಶ್ರೀರಾಮನು ಅವರನ್ನು ಆರು ತಿಂಗಳು ಸೆರೆಮನೆಯಲ್ಲಿಟ್ಟು ಪರೀಕ್ಷಿಸುವದು ಸ್ವಾರಸ್ಯಕರವಾಗಿದೆ.
ಉ. ಮೊದಲೆರೆಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ.
೧. ಪುರಂದರದಾಸರು : ಪುರಂದರವಿಠಲ : : ಕನಕದಾಸರು : ಕಾಗಿನೆಲೆ ಆದಿಕೇಶವ
೨. ವ್ರಿಹಿ : ಭತ್ತ : : ನರೆದಲಗ : ರಾಗಿ
೩. ಬಾಣಂತಿಯರಿಗೆ : ಪಥ್ಯ : : ಹೆಣದ ಬಾಯಿಗೆ : ತುತ್ತು
೪. ಕ್ಷಿತಿ : ಭೂಮಿ : : ವಿರಂಚಿ : ಬ್ರಹ್ಮ
೫. ಸೆರೆಯೊಳಗೆ : ಆಗಮಸಂಧಿ : : ತಾನೆಲ್ಲಿ : ಲೋಪ ಸಂಧಿ
ಊ. ಗುಂಪಿಗೆ ಸೇರದ ಪದಗಳನ್ನು ಆಯ್ದು ಬರೆಯಿರಿ.
೧. ಹರಿಭಕ್ತಸಾರ ರಾಮಧಾನ್ಯಚರಿತ್ರೆ ರಾಮಾಶ್ವಮೇಧಂ ನಳಚರಿತ್ರೆ
೨. ಕನಕದಾಸರು ಪುರಂದರದಾಸರು ವ್ಯಾಸರಾಯರು ಬಸವಣ್ಣ.
೩. ವ್ರಿಹಿ ಗೋಧಿ ನೆಲ್ಲು ಭತ್ತ
೪. ಗುಣಸಂಧಿ ಲೋಪಸಂಧಿ ಆಗಮಸಂಧಿ ಆದೇಶಸಂಧಿ.
ಅಭ್ಯಾಸ ಚಟುವಟಿಕೆ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.
೧. ಮಾತ್ರೆ ಎಂದರೇನು? ಉದಾಹರಣೆ ಸಹಿತ ವಿವರಿಸಿ.
ಉ: ಛಂದಶ್ಶಾಸ್ತ್ರದಲ್ಲಿ ಮಾತ್ರೆ, ಎಂದರೆ ಕಾಲವನ್ನು ಅಳೆಯುವ ಮಾನ. ಒಂದು ಹ್ರಸ್ವ ಅಕ್ಷರವನ್ನು ಉಚ್ಚರಿಸಲು ಬೇಕಾಗುವ ಕಾಲವೇ ಒಂದು ಮಾತ್ರಾಕಾಲ. ಮಾತ್ರೆಗಳಲ್ಲಿ ಲಘು ಮತ್ತು ಗುರು ಎಂಬ ಎರಡು
ವಿಧಗಳಿವೆ.
೨. ಮಾತ್ರಾಗಣ ಎಂದರೇನು? ಅದರ ವಿಧಗಳಾವುವು? – ತಿಳಿಸಿ
ಉ: ಮಾತ್ರೆಗಳ ಆಧಾರದಿಂದ ಗಣವಿಭಾಗ ಮಾಡಲಾಗುವ ಮಾತ್ರಾಗಣದಲ್ಲಿ ಮೂರು ಮಾತ್ರೆಯ ಗಣ, ನಾಲ್ಕು ಮಾತ್ರೆಯ ಗಣ ಮತ್ತು ಐದು ಮಾತ್ರೆಯ ಗಣ ಎಂಬುದಾಗಿ ಮೂರು ವಿಧಗಳಿವೆ.
೩. ಕಂದಪದ್ಯದ ಲಕ್ಷಣಗಳೇನು?
ಉ: ನಾಲ್ಕು ಪಾದಗಳಿರಬೇಕು. ಒಂದು ಮತ್ತು ಮೂರನೆಯ ಪಾದಗಳು ಪರಸ್ಪರ ಸಮವಾಗಿದ್ದು ನಾಲ್ಕು ಮಾತ್ರೆಗಳ ತಲಾ ಮೂರು ಮೂರು ಗಣಗಳಿರಬೇಕು. ಎರಡು ಮತ್ತು ನಾಲ್ಕನೆಯ ಪಾದಗಳು ಪರಸ್ಪರ ಸಮವಾಗಿದ್ದು ನಾಲ್ಕು ಮಾತ್ರೆಗಳ ತಲಾ ಐದೈದು
ಗಣಗಳಿರಬೇಕು. ಪ್ರತಿ ಪಾದವೂ ಆದಿಪ್ರಾಸದಿಂದ ಕೂಡಿರಬೇಕು.
೪. ಷಟ್ಪದಿ ಎಂದರೇನು? ಭಾಮಿನಿ ಷಟ್ಪದಿಯ ಲಕ್ಷಣಗಳೇನು?
ಉ: ಆರು ಪಾದಗಳಿಂದ ಕೂಡಿರುವ ಪದ್ಯವೇ ಷಟ್ಪದಿ. ಷಟ್ಪದಿಯಲ್ಲಿ ಶರ, ಕುಸುಮ, ಭೋಗ, ಭಾಮಿನಿ, ವಾರ್ಧಕ, ಪರಿವರ್ಧಿನಿ ಎಂಬ ಆರು ವಿಧಗಳಿವೆ.
ಭಾಮಿನಿ ಷಟ್ಪದಿ ಇಂತಿದೆ:
ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳು ಪರಸ್ಪರ ಸಮವಾಗಿತ್ತವೆ. ಮೂರು ಮಾತ್ರೆಗಳ ಅನಂತರ ನಾಲ್ಕು ಮಾತ್ರೆಗಳ ತಲಾ ಎರಡೆರಡು ಗಣಗಳಿರಬೇಕು.ಮೂರು ಮತ್ತು ಆರನೆಯ ಪಾದಗಳು ಪರಸ್ಪರ ಸಮವಾಗಿದ್ದು ಮೂರು ಮಾತ್ರೆಗಳ ಅನಂತರ ನಾಲ್ಕು
ಮಾತ್ರೆಗಳ ತಲಾ ಮೂರು ಮೂರು ಗಣಗಳು ಮತ್ತು ಒಂದು ಗುರು ಇರಬೇಕು. ಪ್ರತಿಪಾದವೂ ಆದಿಪ್ರಾಸದಿಂದ ಕೂಡಿರಬೇಕು.